ಸ್ಟ್ರೋಂಗಿಲೊಯಿಡ್ ಹುಳು ರೋಗವು (ಸ್ಟ್ರೋಂಗಿಲೊಯಿಡೋಸಿಸ್) ಒಂದು ಪರಾನ್ನಜೀವಿ ರೋಗ. ಇದನ್ನು ಸ್ಟ್ರಾಂಗಿಲಾಯಿಡ್ ಸ್ಟರ್ಕೊರಾಲಿಸ್ ಎಂಬ ಜೀವಿ ಉಂಟುಮಾಡುತ್ತದೆ. ಇದನ್ನು ಜಗತ್ತಿನಾದ್ಯಂತ ಗುರುತಿಸಲಾಗುತ್ತಿತ್ತು. ಜನರಲ್ಲಿ ಆರೋಗ್ಯ ಪ್ರಜ್ಞೆ - ಸ್ವಚ್ಛತೆ ಹೆಚ್ಚಿದಂತೆ ಈ ರೋಗ ಕಡಿಮೆಯಾಗತೊಡಗಿದೆ. ಇದು ಕೇರಳದ ಸಮುದ್ರ ದಡ ಹಾಗೂ ಚೀನಾದ ಸಮುದ್ರ ದಡಗಳಲ್ಲಿ ವಾಸಿಸುವ ಜನರನ್ನು ಪೀಡಿಸುತ್ತಿತ್ತು. ಕಾರಣ ಈ ರೋಗವನ್ನು "ಕೋಚಿನ್ - ಚೈನಾ ಬೇಧಿ" ಎಂದೇ ಕರೆಯಲಾಗುತಿತ್ತು. ಇದು ವಿಶ್ವಾದ್ಯಂತ ೩೦-೧೦೦ ದಶಲಕ್ಷ ಜನರನ್ನು ಬಾಧಿಸುತ್ತದೆ ಎಂದು ಕಡಿಮೆಮಟ್ಟದ ಅಂದಾಜುಗಳು ಸಾಧಿಸುತ್ತವೆ. ಮೇಲ್ಮಟ್ಟದ ಅಂದಾಜುಗಳು ಈ ಸೋಂಕು ೩೭೦ ದಶಲಕ್ಷದವರೆಗೆ ಅಥವಾ ಅದಕ್ಕೂ ಹೆಚ್ಚು ಜನರನ್ನು ಬಾಧಿಸುತ್ತದೆಂದು ಮಿತವಾಗಿ ಊಹಿಸುತ್ತವೆ. == ರೋಗಲಕ್ಷಣಗಳು == ರೋಗಿಯ ಪ್ರಮುಖ ತೊಂದರೆಯೆಂದರೆ ವಿಪರೀತ ಬೇಧಿ. ದಿನಕ್ಕೆ 8 - 10 ಸಲ ಬೇಧಿಯಾಗುತ್ತದೆ. ಮಲದಲ್ಲಿ ಕೀವು ರಕ್ತ ಕಾಣುತ್ತದೆ. ಹೊಟ್ಟೆ ಸದಾಕಾಲ ಮುರಿಯುತ್ತದೆ. ಸ್ಪರ್ಶ ವೇದನೆ ಮಹತ್ವದ ರೋಗ ಲಕ್ಷಣ. == ರೋಗದ ಪತ್ತೆ == ಮಲ ಪರೀಕ್ಷೆ ಮಾಡಿದರೆ ಮಲದಲ್ಲಿ ಸಾವಿರಾರು ಹುಳುವಿನ ಮರಿಗಳು ಕಾಣುತ್ತವೆ. ಹಾವಿನ ಮರಿಗಳಂತೆ ಈಜಾಡುತ್ತಿರುತ್ವೆ. ಈ ಮರಿಗಳನ್ನು ಕೇವಲ ಸೂಕ್ಷ್ಮದರ್ಶಕದಲ್ಲಿ ನೋಡಬಹುದು. ಬರಿಗಣ್ಣಿಗೆ ಇವುಗಳನ್ನು ನೋಡಲು ಸಾಧ್ಯವಿಲ್ಲ. == ದೇಹದಲ್ಲಿ ಹುಳುಗಳ ವಾಸ == ಸಾಮಾನ್ಯವಾಗಿ ಈ ಹುಳುಗಳು ಕರುಳಿನ ಭಿತ್ತಿಯಲ್ಲಿ ವಾಸಿಸುತ್ತವೆ. ಅಲ್ಲಿಯೇ ಇದ್ದು ಕರುಳಿನ ಭಿತ್ತಿಯಲ್ಲಿ ಉರಿಯೂತ ಹುಟ್ಟಿಸುತ್ತದೆ. ಮರಿಗಳನ್ನು ಹಾಕುತ್ತವೆ. ಈ ಹುಳು ಹಾಗೂ ಮರಿಗಳು ಕರುಳಿನ ಭಿತ್ತಿಯಲ್ಲಿ ಸುರಂಗ ಕೊರೆದು ಅಡ್ಡಾಡುತ್ತವೆ. ಕೀವು ರಕ್ತ ಸೋರುತ್ತದೆ. ಒಂದು ವೇಳೆ ರೋಗಿಯ ರೋಗ ನಿರೋಧಕ ಶಕ್ತಿ ಕಳೆಗುಂದಿದರೆ ಕರುಳಿನಲ್ಲಿ ವಾಸಿಸುತ್ತಿದ್ದ ಹುಳುಗಳಿಗೆ ಹುಚ್ಚು ಹಿಡಿದಂತಾಗಿ ಅವು ಸುರಂಗಗಳನ್ನು ಕೊರೆಯುತ್ತಾ ದೇಹದಲ್ಲೆಲ್ಲ ಪಸರಿಸುತ್ತವೆ. ಅಂದರೆ, ಕರುಳಿನಿಂದ ಅವು ಕೇಂದ್ರ ನರಮಂಡಲ ಸೇರಿದಂತೆ, ಮೂತ್ರಪಿಂಡ, ಜಠರ, ಯಕೃತ್, ಪುಪ್ಪುಸ ಹಾಗೂ ಮಿದುಳು ಇತ್ಯಾದಿ ಅಂಗಾಂಶದಲ್ಲಿ ಸೇರಿ ವ್ಯಕ್ತಿಯನ್ನು ಸಾಯಿಸಿ ಬಿಡುತ್ತವೆ. ರೋಗ ನಿರೋಧಕ ಶಕ್ತಿ ಹಲವಾರು ಕಾರಣಗಳಿಂದ ಕುಗ್ಗಬಹುದು. ಮಾನವರು ಬಳಸುವ ಕಾರ‍್ಟಿಕೋಸ್ಟಿರೋಯಿಡ್ ಮದ್ದು ನಿರೋಧಕ ಶಕ್ತಿಯನ್ನು ತಕ್ಷಣ ಮುರಿದು ಹಾಕುವುದು. ಕಾರಣ ಈ ರೋಗಿಗಳಿಗೆ ಸ್ಟಿರೋಯಿಡ್ ಉಪಚಾರ ಕೊಟ್ಟರೆ ಫಾಶಿ ಅಥವಾ ಗಲ್ಲು ಶಿಕ್ಷೆ ಕೊಟ್ಟಂತೆಯೇ. ಈ ಹುಳುವು ಕೊಕ್ಕೆ ಹುಳದ ಸಮೀಪ ಸಂಬಂಧಿ. ಇಂದು ಇದಕ್ಕೆ ಒಳ್ಳೆಯ ಮದ್ದು ಇದೆ. ರೋಗದ ಪ್ರಮಾಣವೂ ಕಡಿಮೆಯಾಗಿದೆ. == ರೋಗ ಹರಡುವ ರೀತಿ == ಬರಿಗಾಲಿನಿಂದ ಮಲವಿಸರ್ಜಿಸುವಲ್ಲಿ ಅಡ್ಡಾಡಿದರೆ, ಕೈಗಳಿಂದ ಆ ಮಣ್ಣಿನಲ್ಲಿ ಕೆಲಸಮಾಡಿದರೆ, ನೆಲದಲ್ಲಿ ಕಾಯುತ್ತಿರುವ ಮರಿಗಳು ಚರ್ಮ ಛೇದಿಸಿಕೊಂಡು ದೇಹ ಸೇರುತ್ತವೆ. ಅಲ್ಲಿಂದ ಅವು ರಕ್ತದಲ್ಲಿ ಈಜಾಡುತ್ತಾ ಪುಪ್ಪುಸ ತಲುಪುವುವು. ಪುಪ್ಪುಸದಲ್ಲಿ ವಸತಿ ಹಾಕಿ ಬೆಳೆದು ದೊಡ್ಡವಾಗುತ್ತವೆ. ಆನಂತರ ಪುಪ್ಪುಸದಲ್ಲಿ ರಂಧ್ರ ಕೊರೆದು ಶ್ವಾಸನಾಳ ಸೇರುತ್ತವೆ. ಶ್ವಾಸನಾಳದಲ್ಲಿ ಹೊಟ್ಟೆಹೊಸೆಯುತ್ತಾ ಗಂಟಲು ತಲುಪುವವು. ಗಂಟಲದಲ್ಲಿ ಕುಳಿತು ಕೆರೆತ ಉಂಟು ಮಾಡುವುವು. ಆಗ ವ್ಯಕ್ತಿ ಕೆರೆತ ಕಡಿಮೆ ಮಾಡಲು ಉಗುಳು ನುಂಗುವನು. ಉಗುಳಿನೊಂದಿಗೆ ಹುಳುಗಳು ಕರುಳು ಸೇರುವುವು. ತಮ್ಮ ಹಾಳುಗೆಡುವ ಕಾರ್ಯವನ್ನು ಪ್ರಾರಂಭಿಸುವುವು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == 2010-10-31 ವೇಬ್ಯಾಕ್ ಮೆಷಿನ್ ನಲ್ಲಿ.. .. ()